ಕ್ರಾಂತಿ ಕ್ರಿಯೇಷನ್ ಸಂಸ್ಥೆ ಬರುವ ಭಾನುವಾರ (7-10-2012) ಕನ್ನಡ ಸಿನೆಮಾದ ಶಾಂತಿ ಧೂತ,ದಾದಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಡಾಕ್ಟರ್ ರಾಜಕುಮಾರ್ ಅವರ ಸಮಾಧಿ ಬಳಿ ‘ಕೇಸ್ ನ0 18/9’ ತಂಡದಿಂದ ವಿಶೇಷ ಸಮಾರಂಭವನ್ನು ಬೆಳಗ್ಗೆ 10 ಘಂಟೆಯಿಂದ ಏರ್ಪಾಡು ಮಾಡಿದೆ.
ಡಾಕ್ಟರ್ ರಾಜಕುಮಾರ್ ಸಮಾಧಿ ಬಳಿ ಬಂದು ಆಶೀರ್ವಾದವನ್ನು ಕೋರುವುದು ಚಿತ್ರ ತಂಡದ ಮೊದಲ ಉದ್ದೇಶ. ಆನಂತರ ಅಂದಿನ ವಿಶೇಷ ಏನಪ್ಪಾ ಅಂದರೆ ಅಣ್ಣಾವ್ರ ಸಮಾಧಿಗೆ ವಿಶೇಷ ಅಲಂಕಾರವನ್ನು ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ವಿ.ಕೆ ಮೋಹನ್ (ಕಪಾಲಿ ಮೋಹನ್ ಎಂದೇ ಖ್ಯಾತಿ) ವ್ಯವಸ್ಥೆ ಮಾಡಲಿದ್ದಾರೆ. ಡಾಕ್ಟರ್ ರಾಜಕುಮಾರ್ ಮನೆಯ ನಿಕಟ ವ್ಯಕ್ತಿ ಆದ ವಿ.ಕೆ ಮೋಹನ್ ಹೊಸ ತಂಡಕ್ಕೆ ಆಶೀರ್ವಾದ ಬೇಡುವುದು ಅಲ್ಲದೆ ಡಾಕ್ಟರ್ ರಾಜಕುಮಾರ್ ಕುಟುಂಬದವರನ್ನು ಅಂದು ಬರಮಾಡಿಕೊಂಡು ಅರ್ಧ ದಿವಸದ ಚಿತ್ರೀಕರಣವನ್ನು ಅಲ್ಲಿಯೇಮಾಡಲಿದೆ. ಬಹು ಮುಖ್ಯವಾಗಿ ‘ಕೇಸ್ ನ0 18/9’ ತಂಡದಿಂದ ಸುಮಾರು 2000 ವ್ಯಕ್ತಿಗಳಿಗೆ ಅನ್ನಧಾನದ ವ್ಯವಸ್ಥೆಯನ್ನು ಮಾಡಲಿದೆ.
ಡಾಕ್ಟರ್ ರಾಜಕುಮಾರ್ ಅಂದರೆ ವಿ.ಕೆ ಮೋಹನ್ ಅವರಿಗೆ ಅಚ್ಚು ಮೆಚ್ಚು. ಅವರ ನಂತರವೂ ಅವರು ಅದೇ ಸ್ನೇಹವನ್ನು ವಿಶ್ವಾಸವನ್ನು ಡಾಕ್ಟರ್ ರಾಜ್ ಕುಟುಂಬದೊಂದಿಗೆ ಇಟ್ಟುಕೊಂಡಿದ್ದಾರೆ.
ಭಾನುವಾರದ ಬೆಳಗಿನ ಕಾರ್ಯಕ್ರಮದಲ್ಲಿ ವಿ.ಕೆ ಮೋಹನ್ ಅವರ ಜೊತೆಯಲ್ಲಿ ಚಿತ್ರದ ಇತರ ನಿರ್ಮಾಪಕರಾದ ಪ್ರವೀಣ್ ಕುಮಾರ್ ಶೆಟ್ಟಿ, ಶಿವಾನಂದ್ ಶೆಟ್ಟಿ, ಕಾಂತಿ ಶೆಟ್ಟಿ ಅಲ್ಲದೆ ನಿರ್ದೇಶಕರಾದ ಮಹೇಶ್ ರಾವು, ಛಾಯಾಗ್ರಾಹಕ ಸಭಾ ಕುಮಾರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಕಲಾವಿದರಾದ ನಿರಂಜನ್, ಶ್ವೇತ ಪಂಡಿತ್, ಅಭಿ, ಸಿಂಧು ಲೋಕ ನಾಥ್ ಹಾಗೂ ಇತರರು ಇರುವರು.